ಶಿವನ ವಿಶ್ರಾಂತಿಯ ಕಾಲ ಎಂದರೇನು?

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ದಿನದಲ್ಲಿ ೪ ಪ್ರಹರಗಳು ಮತ್ತು ರಾತ್ರಿಯಲ್ಲಿ ೪ ಪ್ರಹರಗಳು ಹೀಗೆ ೨೪ ಗಂಟೆಗಳಲ್ಲಿ ಒಟ್ಟು ೮ ಪ್ರಹರಗಳಿವೆ. ಒಂದು ಪ್ರಹರವು ೩ ಗಂಟೆಯದ್ದಾಗಿದೆ.
ಶಿವನ ಗಾಢ ನಿದ್ರಾವಸ್ಥೆಯ (ಪ್ರದೋಷಕಾಲದ) ಕಾಲದಲ್ಲಿ ಮಾಡಿದ ಉಪಾಸನೆಯ ಲಾಭ: ಯಾವಾಗ ಶಿವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆಯೋ, ಆ ೩೦ಸೆಕೆಂಡುಗಳಲ್ಲಿಯೂ ಮಧ್ಯದ ಕೆಲವು ಕ್ಷಣ ಶಿವನ ಗಾಢ ನಿದ್ರಾವಸ್ಥೆ (ಸಮಾಧಿ ಅವಸ್ಥೆ) ಇರುತ್ತದೆ. ಅದಕ್ಕೆ ಪ್ರದೋಷ ಅಥವಾ ನಿಷಿದ್ಧಕಾಲ ಎನ್ನುತ್ತಾರೆ. ಭೂಮಿಯ ಮೇಲೆ ಈ ಕಾಲವು ಸಾಧಾರಣ ಒಂದರಿಂದ ಒಂದೂವರೆ ಗಂಟೆಗಳಷ್ಟು ಇರುತ್ತದೆ. ಪ್ರದೋಷ ಕಾಲದಲ್ಲಿ ಯಾವುದೇ ಮಾರ್ಗದಿಂದ, ಯಾವುದೇ ಜ್ಞಾನವಿಲ್ಲದೇ ಅಥವಾ ಗೊತ್ತಿಲ್ಲದೆಯೇ ನಮ್ಮಿಂದ ಶಿವನ ಉಪಾಸನೆಯಾದರೆ ಹಾಗೂ ಮಾಡಿದ ಉಪಾಸನೆಯಲ್ಲಿ ದೋಷವಿದ್ದರೂ ಶೇ.೧೦೦ರಷ್ಟು ಫಲ ಸಿಗುತ್ತದೆ. ಈ ವರವನ್ನು ಶಂಕರನೇ ಕೊಟ್ಟಿದ್ದಾನೆ. ಈ ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಪ್ರದೋಷ ಕಾಲದಲ್ಲಿ ಮಾಡುವ ಅಭಿಷೇಕವನ್ನು ‘ಮಹಾ-ಅಭಿಷೇಕ’ ಎನ್ನುತ್ತಾರೆ. ಪ್ರದೋಷ ಕಾಲದಲ್ಲಿ ಶಿವನ ನಾಮಜಪ ಮಾಡುವುದರಿಂದ ಕೆಟ್ಟಶಕ್ತಿಗಳ ತೊಂದರೆಯಾಗದಂತೆ ರಕ್ಷಣೆಯಾಗುತ್ತದೆ. ಭಗವಾನ ಶಂಕರನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ತೆಗೆದು ಕೊಳ್ಳುತ್ತಾನೆ, ಆ ಪ್ರಹರವನ್ನೇ ‘ಮಹಾಶಿವರಾತ್ರಿ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಶಿವನ ಉಪಾಸನೆ ಮಾಡುವ ಶಾಸ್ತ್ರ ಈ ರೀತಿ ಇದೆ. ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ಶಿವ ತತ್ತ್ವವು ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಸ್ವೀಕರಿಸುವುದಿಲ್ಲ. ಇದರಿಂದ ಬ್ರಹ್ಮಾಂಡದಲ್ಲಿ ತಮೋಗುಣವು ಬಹಳ ಹೆಚ್ಚಾಗುತ್ತದೆ ಅಥವಾ ಕೆಟ್ಟಶಕ್ತಿಗಳ ಒತ್ತಡವು ಪ್ರಚಂಡವಾಗಿರುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿಹೂವು, ರುದ್ರಾಕ್ಷಿಗಳ ಮಾಲೆ ಇತ್ಯಾದಿಗಳನ್ನು ಶಿವಲಿಂಗಕ್ಕೆ ಅರ್ಪಿಸಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸಲಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳಿಂದ ಹೆಚ್ಚಾಗಿರುವ ಒತ್ತಡವು ನಮಗೆ ಅಷ್ಟೊಂದು ಅರಿವಾಗುವುದಿಲ್ಲ.
- ಬ್ರಹ್ಮತತ್ತ್ವ (ಓರ್ವ ಸಾಧಕಿಯ ಮಾಧ್ಯಮದಿಂದ)

No comments:

Post a Comment