ಒಂದು ಹೆಸರಾಂತ ನಿಯತಕಾಲಿಕೆಯಲ್ಲಿ ಓರ್ವ ಮಹಿಳಾ ಆರೋಪಿಯ ನ್ಯಾಯಾಲಯದಲ್ಲಿ ವಿವಸ್ತ್ರಳಾಗುವ ಪ್ರಯತ್ನ, ಎನ್ನುವ ಶೀರ್ಷಿಕೆಯಲ್ಲಿ ವಾರ್ತೆಯೊಂದು ಪ್ರಕಟವಾಯಿತು. ಈ ಮಹಿಳೆ ಓರ್ವ ಸಾಮಾನ್ಯ ನಾಗರಿಕಳಾಗಿರದೆ ‘ರಾ’ ಈ ಗುಪ್ತಚರ ವಿಭಾಗದ ಮಾಜಿ ಅಧಿಕಾರಿಯಾಗಿದ್ದಾಳೆ. ಮಾಜಿ ಅಂದ ಮೇಲೆ ಯಾರೋ ವಯೋವೃದ್ಧಳಾಗಿರಬಹುದು ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ಈ ಪ್ರಕರಣದಲ್ಲಿ ಹಾಗಿಲ್ಲ. ಈ ಮಹಿಳೆ ೩೦ರ ಹರಯದವಳಾಗಿದ್ದಾಳೆ. ಈ ಘಟನೆಯಿಂದ ಪ್ರಜಾಪ್ರಭುತ್ವದ ಒಂದು ಸ್ತಂಭವನ್ನೇ ಅಲ್ಲಾಡಿಸುವ ಪ್ರಸಂಗ ನಡೆದಿದೆಯೆಂದರೆ, ಈ ಘಟನೆ ಏನಿರಬಹುದು? ಆ ಮಹಿಳೆಯ ವ್ಯಥೆ!
ಗುಪ್ತಚರ ವಿಭಾಗದ ಅಧಿಕಾರಿಗಳಿಗಾಗುವ ಅವಮಾನವನ್ನು ತಪ್ಪಿಸುವುದಕ್ಕಾಗಿ ಈ ಮಹಿಳೆಯ ಮೇಲೆ ಮಾನವೀ ಸಾಗಾಟದ ಆರೋಪ ಹೊರಿಸಿ ಮೊಕದ್ದಮೆ ಹೂಡುವ ತಂತ್ರ ರೂಪಿಸಲಾಯಿತು. ಇದು ಎರಡು ವರ್ಷಗಳ ಹಿಂದಿನ ವಿಷಯವಾಗಿದ್ದು ಈ ಖಟ್ಲೆ ಬಗ್ಗೆ ಇದುವರೆಗೆ ಆಲಿಕೆ ಆರಂಭವಾಗಿಲ್ಲ; ಬದಲಾಗಿ ಪ್ರತಿ ಬಾರಿ ಮುಂದಿನ ದಿನಾಂಕ ನೀಡಲಾಗುತ್ತದೆ ಎಂದು ಈ ಮಹಿಳೆಯು ತನ್ನ ವ್ಯಥೆಯನ್ನು ವ್ಯಕ್ತಪಡಿಸುತ್ತಾಳೆ. ಈ ಖಟ್ಲೆಯ ಆಲಿಕೆಯನ್ನು ಪುನಃ ಪುನಃ ಮುಂದೂಡುವುದರಿಂದ ಬೇಸತ್ತು ಅವಳು ತುಂಬಿದ ನ್ಯಾಯಾಲಯದಲ್ಲಿ ವಿವಸ್ತ್ರಳಾಗಲು ಪ್ರಯತ್ನಿಸಿದಳು. ಅವಳು ಮಾಡಿದ ಆತ್ಮಹತ್ಯೆಯ ಪ್ರಯತ್ನ ಹಾಗೂ ಈಗ ನ್ಯಾಯಾಲಯದಲ್ಲಿ ವಿವಸ್ತ್ರಳಾಗಲು ಮಾಡಿದ ಪ್ರಯತ್ನ ಇವೆರಡೂ ವಿಷಯಗಳು ಮಹತ್ವದ್ದಾಗಿವೆ. ಅವಳಿಗೆ ಕಿರುಕುಳ ನೀಡಿದ ಇನ್ನೂ ಇಬ್ಬರು ಅಧಿಕಾರಿಗಳ ಹೆಸರನ್ನೂ ಅವಳು ಹೇಳಿದ್ದಾಳೆ. ಇದರಿಂದ ಅವಳು ಮಾನಭಂಗಕ್ಕೆ ತುತ್ತಾಗಿದ್ದಾಳೆಂದು ಹೇಳಲು ಪುಷ್ಟಿ ಸಿಗುತ್ತದೆ. ಭಾರತೀಯ ಜೀವನದಲ್ಲಿ ಮಹಿಳೆಗೆ ಗೌರವಯುತ ಸ್ಥಾನವಿದೆ. ಅವಳು ಅತ್ಯಾಚಾರಕ್ಕೆ ತುತ್ತಾಗಿದ್ದರೆ ಅವಳಿಗೆ ನ್ಯಾಯ ದೊರಕಿಸಿಕೊಡುವುದು ಸರಕಾರದ ಕರ್ತವ್ಯವಾಗಿದೆ. ತುಂಬಿದ ನ್ಯಾಯಾಲಯದಲ್ಲಿ ವಿವಸ್ತ್ರಳಾಗಿ ತನ್ನ ಉದ್ವೇಗವನ್ನು ವ್ಯಕ್ತಪಡಿಸುವ ಸ್ಥಿತಿ ಈ ಮಹಿಳೆಗೆ ಏಕೆ ಬಂದೊದಗಿರಬಹುದು? ನ್ಯಾಯದಾನ ವ್ಯವಸ್ಥೆಯಲ್ಲಿನ ದುರವಸ್ಥೆಯನ್ನು ಬಹಿರಂಗಗೊಳಿಸಲಿಕ್ಕಾಗಿ ಓರ್ವ ಮಹಿಳೆ ತನ್ನ ಶೀಲ ಪ್ರದರ್ಶನಕ್ಕೆ ಉದ್ಯುಕ್ತಳಾಗುತ್ತಾಳೆ ಎಂದ ಮೇಲೆ ಇನ್ನೇನು ಉಳಿಯಿತು. ಕೊಳೆಯುತ್ತಿರುವ ಖಟ್ಲೆಗಳ ಹಾಗೂ ದೇಶಕ್ಕೆ ಅವಶ್ಯಕವಿರುವ ನ್ಯಾಯಾಧೀಶರ ಅಂಕಿಅಂಶವನ್ನು ಮಧ್ಯೆ-ಮಧ್ಯೆ ಪ್ರಕಟಿಸುವ ಕರ್ಮಕಾಂಡವನ್ನು ಸರಕಾರ ಮಾಡುತ್ತಾ ಇರುತ್ತದೆ. ಅದರಿಂದ ನಾಗರಿಕರಿಗೆ ನ್ಯಾಯ ದೊರೆಯುವುದಿಲ್ಲ ಅಥವಾ ನಾಗರಿಕರಿಂದ ಸರಕಾರಕ್ಕೆ ಸಹಾನುಭೂತಿಯೂ ಸಿಗುವುದಿಲ್ಲ. ಈ ಅಂಕಿಅಂಶವನ್ನು ಪ್ರಸಿದ್ಧಪಡಿಸುವ ಕರ್ಮಕಾಂಡ ಇನ್ನು ನಿಲ್ಲಿಸಬೇಕು. ಅದರ ಬದಲು ಎಲ್ಲಿ ಕೊರತೆಯಿದೆಯೋ ಅದನ್ನು ನೀಗಿಸುವ ಪ್ರಯತ್ನ ಗಳಾಗಬೇಕು. ೧೨೦ಕೋಟಿ ಜನಸಂಖ್ಯೆಯಿರುವ ದೇಶದ ಆಡಳಿತವು ಪುಂಡರ ಕೈಗೆ ಹೋಗಬಾರದು ಎಂಬುದನ್ನು ನಾಗರಿಕರು ತಿಳಿದುಕೊಳ್ಳಬೇಕು. ‘ಏನು ಇರಬೇಕು, ಏನು ಇರಬಾರದು’ ಎನ್ನುವ ವಿಷಯದಲ್ಲಿ ಬಹಳಷ್ಟು ಹೇಳಬಹುದು; ಆದರೆ ‘ಗೋರ್ಕಲ್ಲ ಮೇಲೆ ನೀರು ಸುರಿದಂತೆ’ ಆಗುತ್ತಿದ್ದರೆ ಸಮಯವನ್ನು ನಿರರ್ಥಕ ಕಳೆಯುವುದರಲ್ಲಿ ಅರ್ಥವಿಲ್ಲ. ಇಲ್ಲಿ ಮುಖ್ಯ ವಿಷಯವೆಂದರೆ ಓರ್ವ ಮಹಿಳೆ ತುಂಬಿದ ನ್ಯಾಯಾಲಯದಲ್ಲಿ ವಿವಸ್ತ್ರವಾಗಲು ಪ್ರಯತ್ನ ಮಾಡಿರುವುದು! ಭಾರತೀಯ ಮಹಿಳೆಯು ಭಾರತೀಯ ನ್ಯಾಯಾಲಯದಲ್ಲಿ ಮಾಡಿರುವ ಈ ಕೃತಿಯು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಚ್ಚೊತ್ತಿರಬಹುದು. ಪೊಲೀಸರು ಈ ಮಹಿಳೆ ವಿವಸ್ತ್ರಳಾಗುವುದನ್ನು ತಪ್ಪಿಸಿದರು. ಆದರೂ ನ್ಯಾಯದಾನ ಪ್ರಕ್ರಿಯೆಯು ವಿವಸ್ತ್ರವಾಯಿತು ಎಂಬುದನ್ನು ಇದರಿಂದ ಕಲಿಯಬೇಕು.
No comments:
Post a Comment